Pages

Monday, November 1, 2010

ನಮಗೆ ಕನ್ನಡ, ಕನ್ನಡಕ್ಕೆ ನಾವು??

     ನವಂಬರ್ ಒಂದು ಮತ್ತೆ ಬಂದಿದೆ. ಸರ್ಕಾರದ್ದು ಬದಲಾಗದ ಸಂಕಲ್ಪ.ನಂಜುಂಡಪ್ಪ ವರದಿ ಅನುಷ್ಟಾನ ಮಾಡ್ತೀವಿ,  ಮಹಾರಾಷ್ಟ್ರದವರು ನಂಜುಂಡಪ್ಪ ವರದಿಗೆ ಭದ್ಧರಾಗಿರಬೇಕು, ನಂಜುಂಡಪ್ಪ ವರದಿಯೇ ಅಂತಿಮ, ಸರೋಜಿನಿ ಮಹಿಶಿ ವರದಿಯಂತೆ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತೇವೆ, ರೈಲ್ವೇ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ, ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ; ಈ ಕುರಿತು ಸಧ್ಯದಲ್ಲೇ ಪ್ರಧಾನಿ ಬಳಿಗೆ ನಿಯೋಗ, ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲೇ ನಡೆಸುತ್ತೇವೆ,..ಇತ್ಯಾದಿ ಇತ್ಯಾದಿ.

     ಇನ್ನು ನಾವು? ಎರಡು ದಿನ ಮುಂಚೆಯೇ "ಕನ್ನಡ ರಾಜ್ಯೋತ್ಸವದ" ಶುಭಾಶಯಗಳ ವಿನಿಮಯ ಶುರು. Happy kannada raajyothsava ಅಂತ ಟೈಪಿಸುವವರೂ ಉಂಟು! ರಾಜ್ಯೋತ್ಸವ ಒಂದಿನ ಪೂರ್ತಿ ಕನ್ನಡ ಭಜನೆ-ಸ್ಮರಣೆ. "ಇಡೀ ಭಾರತದಲ್ಲಿ ಏಳು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಯಾವುದಾದರು ಇದ್ರೆ ಅದು ಕನ್ನಡ ಅನ್ನೋ ಮಾತನ್ನ ಈ ಸಂದರ್ಭದಲ್ಲಿ ಹೇಳೋಕೆ ಇಷ್ಟ ಪಡ್ತೀನಿ"  ಅಂತ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸೋದು. ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೇ ಕಳಿಸಿ ಕನ್ನಡಕ್ಕೆ ’ಕೈ’ ಎತ್ತೊ ಬಹುಸಂಖ್ಯಾತ ಶಿಕ್ಷಕರು, ಕನ್ನಡ ಹೋರಾಟಗಾರರು-ಹಾರಾಟಗಾರರು! "ಕನ್ನಡವೇ ಎಲ್ಲಾ" ಅಂತ ಹಾಡಿ ಕುಣಿದು ಆಂಗ್ಲ "ಮಾಧ್ಯಮ"ದಲ್ಲಿ ಸಂದರ್ಶನ ಕೊಡೋ ಚಲನಚಿತ್ರನಟನಟಿಯರು, ಕಿರುತೆರೆ ನಿರೂಪಕ/ಕಿಯರು. ಈ ಎಲ್ಲಾ ಕ್ಷೇತ್ರಗಳಲ್ಲೂ ಅಪವಾದ ಎಂಬತಿರುವವರೂ ಇದ್ದಾರೆ, ಆದರೆ ಅವರು ಸಂಖ್ಯೆ ತೀರಾ ಕಮ್ಮಿ.
     ಕನ್ನಡ ಇಂದು ಹಲವಾರು ಕಾರಣಗಳಿಂದ ಬಹಳಷ್ಟು ಜನರಿಂದ ಅಸಡ್ಡೆಗೆ ಗುರಿಯಾಗುತ್ತಿದೆ. ಕನ್ನಡದ ಬಳಕೆ ಕಡಿಮೆಯಾಗಿದೆ. ಇದಕ್ಕೆ ಸರ್ಕಾರದ ಕೆಲವು ಲೋಪಗಳೂ ಕಾರಣ ಅನ್ನೋದು ನನ್ನ ಅನಿಸಿಕೆ. ಕನ್ನಡದ ಬಳಕೆ ಹೆಚ್ಚಾಗಬೇಕಾದರೆ ಸರ್ಕಾರ ಕೆಲವು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಈ ಕುರಿತು ನನ್ನ ಕೆಲವು ಸಲಹೆಗಳು.

 * ಕನ್ನಡ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಕುಸಿಯೋದನ್ನು ತಡೆಯಬೇಕಾದರೆ ಮೊದಲು ಅಲ್ಲಿನ ಬೋಧನಾ ಗುಣಮಟ್ಟವನ್ನು ವಿಶೇಷವಾಗಿ ಇಂಗ್ಲೀಷ್ ಭಾಷಾ ಬೋಧನಾ ಗುಣಮಟ್ಟವನ್ನು ಹೆಚ್ಚಿಸಬೇಕು. ಅಂತೇಯೇ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸಶಕ್ತವಾಗಿ ಕನ್ನಡದ ಬೋಧನೆಯಾಗುವಂತೆ ನೋಡಿಕೊಳ್ಳಬೇಕು. ಕಾಟಾಚಾರಕ್ಕೆ ಕನ್ನಡ ಕಲಿಸುತ್ತಿರುವ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸುಧಾರಿತ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು.

 * ಮಾಹಿತಿ ತಂತ್ರಜ್ಞಾನದ ಈ ದಿನಗಳಲ್ಲಿ ಯಾವುದೇ ವಿಷಯದ ಬಗ್ಗೆ ನಾವು ಮಾಹಿತಿ ಸಂಗ್ರಹಿಸುವುದು ಕಷ್ಟದ ಕೆಲಸವಲ್ಲ.ಆದರೆ ಆಂಗ್ಲ ಭಾಷೆಯಲ್ಲಿ ಇರುವಷ್ಟು ಮಾಹಿತಿ ಕನ್ನಡ ಭಾಷೆಯಲ್ಲಿ ಲಭ್ಯವಿಲ್ಲ. ಮಾಹಿತಿಯ ’ಕನ್ನಡೀಕರಣ’ ಕ್ಕೆ ಸರ್ಕಾರ ಗಂಭೀರವಾಗಿ ಪ್ರಯತ್ನಿಸಬೇಕು. ಕನ್ನಡ ತಂತ್ರಾಂಶಗಳ ಅಭಿವ್ರುದ್ಧಿಗೆ ಪ್ರೋತ್ಸಾಹ ನೀಡಬೇಕು.ಗಣಕ ಯಂತ್ರಗಳಲ್ಲಿ ಕನ್ನಡ ರಾರಾಜಿಸಿದರೆ ಜನರನ್ನು ಮುಟ್ಟುವುದು ಕಷ್ಟವಾಗದು.

 * ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಒಂದು ಸುಸಜ್ಜಿತ ಕನ್ನಡ ಪುಸ್ತಕ ಮಳಿಗೆಯನ್ನು ಸ್ಥಾಪಿಸಬೇಕು.

 * ನಾವು ಅತಿಯಾಗಿ ಬಳಸುವ ಅನ್ಯ ಭಾಷೆಯ ಪದಗಳನ್ನು ಮುಕ್ತವಾಗಿ ಕನ್ನಡಕ್ಕೆ ಸೇರಿಸಿಕೊಳ್ಳಬೇಕು.ಕೇವಲ ೨೬ ಅಕ್ಶರಗಳ         ಆಂಗ್ಲ ಭಾಷೆ ಜಗತ್ತಿನಾದ್ಯಂತ ಹರಡಲು ಅದು ಬೇರೆ ಭಾಷೆಯ ಪದಗಳನ್ನು ತನ್ನದಾಗಿಸಿಕೊಳ್ಳುತ್ತಿರುವುದೂ ಪ್ರಮುಖ ಕಾರಣ.  ಕನ್ನಡವೂ ಸಹ ಮುಕ್ತವಾಗಿ ಬೇರೆ ಭಾಷೆಯ ಪದಗಳ ಕನ್ನಡೀಕರಣಕ್ಕೆ ಮುಂದಾಗಬೇಕು.

     ನಮ್ಮ ಪಾತ್ರ: ಕನ್ನಡ ಭಾಷೆಯನ್ನು ಹೆಚ್ಚೆಚ್ಚು ಬಳಕೆ ಮಾಡುವ ಮೂಲಕ ನಮ್ಮ ಕನ್ನಡತನವನ್ನು ಉಳಿಸಿ ಬೆಳೆಸಬೇಕಿದೆ. ಇಷ್ಟಕ್ಕೂ ಕನ್ನಡದ ಹೊಣೆ ಕೇವಲ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಕ್ಷಣೆ ವೇದಿಕೆಗಳದ್ದಲ್ಲ.
     ಹೀಗೂ ಉಂಟು!:ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬನ ಬೈಕಿನ ಮೇಲೆ ಕನ್ನಡ ನಾಮಫಲಕ ನೋಡಿದ ನಾನು ಖುಶಿಯಿಂದ ಅವನಿಗೆ "ಎನ್ಲೆ ನಂಬರ್ ಪ್ಲೇಟ್ ಕನ್ನಡದಾಗ ಬರಶೀಲಾ? ಭಾರ್ರಿ ಆತ್ಪಾ" ಎಂದ ತಕ್ಷಣ ಅವನು "ಹೂಂಲೆ ಸುಳಿ ಮಕ್ಳ ಪೋಲಿಸರಿಗಿ ಗೊತ್ತ ಆಗಬಾರದಲಾ ಅದಕ್ಕ್" ಅಂದ! ಕನ್ನಡ ನಾಮಫಲಕ ಹಾಕಿಸೋ ಎಲ್ಲರಿಗೂ ಇದೇ ಉದ್ದೇಶ ಇರುತ್ತೆ ಅನ್ನೋದು ನನ್ನ ಉದ್ದೇಶವಲ್ಲ.ಕನ್ನಡವನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಬಳಸುತ್ತಿರುವ ಅವನನ್ನು ಕಂಡು ನಾನು ಬೆರಗಾಗಿದ್ದು ಮಾತ್ರ ಖರೆ.

     ಸರ್ಕಾರ ಏನೇ ಕ್ರಮ ಕೈಗೊಂಡರೂ ಅಂತಿಮವಾಗಿ ಕನ್ನಡದ ಅಳಿವು-ಉಳಿವು-ಏಳಿಗೆ ಎಲ್ಲ ನಮ್ಮ ಮನೋಧರ್ಮದ ಮೇಲೆಯೇ ಅವಲಂಬಿತವಾಗಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಮಾಡಿಕೊಂಡವರು ಉಳಿದವರಿಗೆ ಅರ್ಥ ಮಾಡಿಸಬೇಕು!

                                   ಜೈ ಕರ್ನಾಟಕ.
                                                                                   ಇಂತಿ ಎಲ್ಲರವ,
                                                                       ಕಾಡಸಿದ್ಧೇಶ್ವರ ಕರಗುಪ್ಪಿ
                                                                                    ಹಿಡಕಲ್ ಡ್ಯಾಂ

2 comments:

Shrinivas said...

ಒಂದು ಒಳ್ಳೆಯ ಲೇಖನ.. ಉತ್ತಮವಾದ ಬರಹ ಮತ್ತು ಕನ್ನಡ ಕೈಂಕರ್ಯ ಲೇಖನದಲ್ಲಿ ಸಮ್ಮೇಳಿತವಾಗಿದೆ.

Kadasiddeshwar Karaguppi said...

ರವಿ ಕಾಣದ್ದು ಕವಿ ಕಂಡ
ಕಾಡೇಶ ಕಾಣದ್ದು ಶ್ರೀನಿವಾಸ ಕಂಡ!

Post a Comment