Pages

Saturday, November 27, 2010

'ವಿಜಯ ಕರ್ನಾಟಕ'ಕ್ಕೊಂದು ನಮಸ್ಕಾರ ಮತ್ತು ಧನ್ಯವಾದ

      ದಿನದಿಂದ ದಿನಕ್ಕೆ ನಾನು ಥ್ಯಾಂಕ್ಸ್ ಹೇಳಬೇಕಾದವರ ಲಿಸ್ಟ್ ದೊಡ್ಡದಾಗುತ್ತ ಹೋಗುತ್ತಿದೆ. ಅಲ್ಬರ್ಟ್ ಐನ್ ಸ್ಟೀನ್ ಹೇಳಿದ ಮಾತಿದು  “A hundred times everyday I remind myself that my inner and outer life is depended on the labors of other men; living and dead, and I must exert myself in order to give in the same measure as I have received and still receiving”
  
      ಈಗ ನಾನು ಅರ್ಜೆoಟಾಗಿ ಧನ್ಯವಾದ ಸಲ್ಲಿಸಬೇಕಾದದ್ದು ವಿಜಯ ಕರ್ನಾಟಕಕ್ಕೆ! ನನಗೆ ಪಠ್ಯೇತರ ಓದಿನಲ್ಲಿ ಮೊದಲು ಆಸಕ್ತಿ ಮೂಡಿಸಿದ್ದು ಶಿವರಾಮ ಕಾರಂತರು. ನಂತರ ಅದನ್ನು ಪೋಶಿಸಿ ಬೆಳೆಸಿದ್ದು "ವಿಜಯ ಕರ್ನಾಟಕ"! ಅದರಲ್ಲೂ ವಿಜಯ ಕರ್ನಾಟಕದ ಸಂಪಾದಕೀಯ ಪುಟ ಅಂದಿನಿಂದ ಇವತ್ತಿನವರೆಗೆ ನನಗೆ ಒಂದು ಆಕರ್ಷಣೆಯಾಗಿಯೇ ಉಳಿದಿದೆ. ವಿಜಯ ಕರ್ನಾಟಕಕ್ಕೆ ನಾನು ಧನ್ಯವಾದ ಹೇಳಲೇಬೇಕು! ಇಷ್ಟಕ್ಕೂ ವಿಜಯ ಕರ್ನಾಟಕ ಮಾಡಿದ್ದೇನು ಸಾಮಾನ್ಯ ಕೆಲಸವನ್ನೆ? ಮೊದಲು ಅತ್ಯಂತ ಕಡಿಮೆ ಬೆಲೆಗೆ ಪತ್ರಿಕೆ ಮಾರಾಟ ಮಾಡುವ ಮೂಲಕ ಜನರನ್ನು(ಓದುಗರನ್ನು) ಆಕರ್ಷಿಸಿದ ವಿಜಯ ಕರ್ನಾಟಕ ನಂತರ ತನ್ನ ಹೊಸತನ, ದಿಟ್ಟತನ, ವಿಭಿನ್ನತೆಗಳಿಂದ ಜನರ ಮನಸ್ಸನ್ನು ಇಂದಿಗೂ ಹಿಡಿದಿಟ್ಟಿದೆ. ಕನ್ನಡ ಪತ್ರಿಕೆಗಳ ಪ್ರಸಾರವನ್ನು ದಾಖಲೆ ಮಟ್ಟಕ್ಕೆ ಏರಿಸಿದ್ದು ವಿಜಯ ಕರ್ನಾಟಕ. ನಿದ್ರಿಸುತ್ತಿದ್ದ ಕನ್ನಡದ ಇತರ ಪತ್ರಿಕೆಗಳಿಗೆ ಶಾಕ್ ಕೊಟ್ಟು ಓಡೋ ಹಾಗೆ ಮಾಡಿದ್ದು ವಿಜಯ ಕರ್ನಾಟಕ. ಇತ್ತೀಚೆಗೆ ಜಾಹೀರಾತುಗಳು ಸ್ವಲ್ಪ ಜಾಸ್ತಿಯಾಗಿದೆ. ನಮ್ಮ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ೨೫ನೇ ವರ್ಷ ಪೂರೈಸಿದಾಗ ವಿಶೇಷ ವರದಿ/ಸಂಚಿಕೆ ಪ್ರಕಟಿಸದೇ ಇದ್ದದ್ದು ವಿಜಯ ಕರ್ನಾಟಕದ ಬಗ್ಗೆ ನನಗಿರುವ objection!. ಕರ್ನಾಟಕದಲ್ಲಿ ವಿರೋಧ ಪಕ್ಷದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವುದು ಕಾಂಗ್ರೆಸ್ಸೂ ಅಲ್ಲ ಜೆ.ಡಿ.ಎಸ್ಸೂ ಅಲ್ಲ; ಅದು ವಿಜಯ ಕರ್ನಾಟಕ! ಆಡಳಿತ ಪಕ್ಷದ ಕೆಲಸವನ್ನೂ ವಿಜಯ ಕರ್ನಾಟಕ ನಿರ್ವಹಿಸಿದೆ.(ದಾಂಡೇಲಿ ಸಮೀಪದ ಅರಣ್ಯವನ್ನು ಸರ್ಕಾರದ ಕಡೆಯಿಂದ ಹಾರ್ನ್ ಬಿಲ್ ಹಕ್ಕಿಯ ರಕ್ಷಿತ ಅರಣ್ಯವಾಗಿ ಘೋಷಿಸುವಂತೆ ಒತ್ತಾಯಿಸಿ ಯಶಸ್ವಿಯಾಗಿದ್ದು, ಬರ್ಹೇನ್ ಕನ್ನಡ ಸಂಘಕ್ಕೆ ೧ ಕೋಟಿ ರುಪಾಯಿ ದೊರಕಿಸಿಕೊಟ್ಟಿದ್ದು,...)
        
      ವಿಜಯ ಕರ್ನಾಟಕದ ಕೆಲವು ಅಂಕಣಕಾರರು ಕನ್ನಡದ ಉಳಿದ ದಿನಪತ್ರಿಕೆಗಳ ಸಂಪಾದಕರಿಗಿಂತ ಹೆಚ್ಚು ಖ್ಯಾತಿ,ಪ್ರಸಿದ್ಧಿ ಗಳಿಸಿದ್ದಾರೆ! ವಿಜಯ ಕರ್ನಾಟಕದ ಸ್ಟಾರ್ ಅಂಕಣಕಾರರಲ್ಲೊಬ್ಬರಾದ ಪ್ರತಾಪ್ ಸಿಂಹರವರು ತಮ್ಮ ಹಲವು ಪುಸ್ತಕಗಳನ್ನು pdf ಫಾರ್ಮ್ಯಾಟ್ ನಲ್ಲಿ ತಮ್ಮ ವೆಬ್ ಸೈಟ್( http://pratapsimha.com/)ನಲ್ಲಿ ಪ್ರಕಟಿಸಿರುವುದು(ಉಚಿತವಾಗಿ!) ನನಗೆ ತುಂಬ ಆಶ್ಚರ್ಯ ಮೂಡಿಸಿದೆ. ’ಬೆತ್ತಲೆ ಜಗತ್ತು’ ನನ್ನ ಇಷ್ಟದ ಅಂಕಣಗಳಲ್ಲೊಂದು. ಅಮೆರಿಕದಲ್ಲಿ ನೆಲೆಸಿದ್ದರೂ ಅತ್ಯಂತ ಸ್ಪಷ್ಟ, ಶುದ್ಧ ಕನ್ನಡದಲ್ಲಿ ಬರೆಯೋ ಶ್ರೀವತ್ಸ ಜೋಶಿಯವರು ತಮ್ಮ”ಪರಾಗ ಸ್ಪರ್ಶ’ ಅಂಕಣಗಳನ್ನು ಧ್ವನಿಮಾಧ್ಯಮದಲ್ಲೂ ಪ್ರಕಟಿಸುತ್ತಾರೆ!(ಈ ವಾರದ ಅಂಕಣವನ್ನು ಇಲ್ಲಿ ಕೇಳಬಹುದು http://sjoshi.podbean.com/) ಅದೂ ಇಂಪಾದ ಸಂಗೀತದೊಂದಿಗೆ! ಅವರ ಅಂಕಣಕ್ಕೆ ’ಪರಾಗಸ್ಪರ್ಶ’ ಎಂದು ನಾಮಕರಣವಾಗುವುದಕ್ಕಿಂತ ಮುಂಚಿನಿಂದಲೂ ಅದನ್ನು ಓದುತ್ತಿದ್ದೇನೆ. ನನಗೆ ಆಶ್ಚರ್ಯ ಮೂಡಿಸೋ ಮತ್ತೊಂದು ಅಂಕಣ ರಾಧಾಕೃಷ್ಣ ಭಡ್ತಿ ಅವರ ’ನೀರು-ನೆರಳು’ ಅಂಕಣ. ನೀರಿನ ಬಗ್ಗೆ ಪ್ರತೀ ವಾರ ಅದೆಲ್ಲಿಂದ ವಿಷಯ ತರ್ತಾರೋ? ಹಲವಾರು ವರ್ಷಗಟ್ಟಲೆ ನೀರು ಮತ್ತು ಪರಿಸರ ಸಂಬಂಧೀ ವಿಷಯಗಳನ್ನು ಬರೆಯೋದು ಅಂದ್ರೆ? ಅವರು ನಿಜಕ್ಕೂ ಅಭಿನಂದನರ್ಹರು. ಇದರ ಜೊತೆಗೆ ರವಿ ಬೆಳಗೆರೆಯವರ ’ಸೂರ್ಯ ಶಿಕಾರಿ’(ಕೆಲವೊಮ್ಮೆ ಹಾಯ್ ಬೆಂಗಳೂರಿನ ’ಬಾಟಮ್ ಐಟೆಮ್’ನ ಬರಹಗಳು ಈ ಅಂಕಣದಲ್ಲಿ ಬಂದಿದ್ದು ನನಗೆ ನೆನಪಿದೆ ಅಥವಾ ಎಲ್ಲ ಬರಹಗಳೂ ಅಲ್ಲಿಯ ಐಟೆಮ್ ಗಳಾ? ನನಗಿನ್ನೂ ಗೊತ್ತಾಗಿಲ್ಲಾ), ಪ್ರಚಲಿತ ವಿಷಯಗಳ ಬಗ್ಗೆ ಪ್ರಖರವಾಗಿ ಬರೆಯೋ ಲೋಕೇಶ್ ಕಾಯರ್ಗ ಅವರ ’ಸಕಾಲಿಕ’, ಆಡಳಿತ ಮತ್ತು ಪ್ರತಿಪಕ್ಷಗಳೆರಡಕ್ಕೂ ವಿರೋಧ ಪಕ್ಷವಾಗಿರುವ ಪಿ.ತ್ಯಾಗರಜ್ ಅವರ ’ಓಳಸುಳಿ’, ’ಚಾಟಿ ಚಟಾಕಿ’, titleನಲ್ಲೇ ನಗೆ ಚಿಮ್ಮಿಸೋ ಕೆ.ವಿ.ಪ್ರಭಾಕರ್ ಅವರ ’ಟಾಂಗ್’, ಜಿ.ಎನ್.ಮೋಹನ್ ಅವರ ’ಮೀಡಿಯಾ ಮಿರ್ಚಿ’, ಸಚಿವ ಸುರೇಶ್ ಕುಮಾರ್ ಅವರ ’ಅನಿಸಿಕೆ’, ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳ ’ಬಿಸಿಲು ಬೆಳದಿಂಗಳು’, ಷಡಕ್ಷರಿ ಅವರ ’ಕ್ಷಣ ಹೊತ್ತು ಆನಿಮುತ್ತು’, ಮುನಿಶ್ರೀ ತರುಣ್ ಸಾಗರ್ ಜಿ ಅವರ ’ನಗ್ನಸತ್ಯ’, ಕೆ.ವಿ.ತಿರುಮಲೇಶ್ ಅವರ ’ಆಳ ನಿರಾಳ’,  ಎ.ಅರ್.ಮಣಿಕಾಂತ್ ಅವರ ಬರಹಗಳು, ಅವಾಗವಾಗ ಬಂದು ಹೋಗೊ ವಿನಾಯಕ್ ಭಟ್ ಮುರೂರು, ಚೈತನ್ಯ ಹೆಗಡೆ, ರಮೆಶ್ ಕುಮಾರ್ ನಾಯಕ್ ಅವರ ಲೇಖನಗಳು, ಹಿಂದೆ ಪ್ರಕಟವಾಗುತ್ತಿದ್ದ ಯಂಡಮೂರಿ ವೀರೇಂದ್ರನಾಥ, ಚಕ್ರವರ್ತಿ ಸೂಲಿಬೆಲೆ, ಸುಧಾ ಮುರ್ತಿ, ಎಚ್.ವೈ.ಶಾರದಾಪ್ರಸಾದ್, ಯಶವಂತ್ ಸರದೇಶಪಾಂಡೆ, ಎಚ್,ಡುಂಡಿರಾಜ್,  ಹಿರೇಮಗಳೂರು ಕಣ್ಣನ್ ಅವರ ಲೇಖನಗಳು.... (ಕೆಲವೊಮ್ಮೆ ಪತ್ರಿಕೆಯಲ್ಲಿ ಪ್ರಕಟವಾದದ್ದಕ್ಕಿಂತ ಭಿನ್ನ ಅಭಿಪ್ರಾಯವನ್ನು ನಾನು ಹೊಂದಿದ್ದರೂ) ಇವೆಲ್ಲ ಒಳ್ಳೆಯ ಓದಿನ ಖುಷಿ ನೀಡಿವೆ.
  
      ಇವರೆಲ್ಲರಿಗೆ ಕಿರೀಟಪ್ರಾಯವಾಗಿ ನಮ್ಮ ವಿಶ್ವೇಶ್ವರ ಭಟ್ಟರು!  ವಿಜಯ ಕರ್ನಾಟಕ ತನ್ನ ಸ್ಟಾರ್ ಸ್ಥಾನಮಾನ ಪಡೆದದ್ದು ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಭಟ್ಟರ ಕಾರ್ಯನಿರ್ವಹಣೆಯನ್ನು ತೋರಿಸುತ್ತೆ.  ಹಲವು  ವರ್ಷಗಳಿಂದ ಅವರ ಬರಹಗಳ ಅಭಿಮಾನಿ ಓದುಗ ನಾನು. ಮುರ್ಡೊಕ್, ಗೋಯೆಂಕಾ,ರುಸ್ಸಿ ಕರಂಜಿಯಾ, ಪಿ.ಸಾಯಿನಾಥ್, ಖುಶ್ವಂತ್ ಸಿಂಗ್, ವಿನೋದ್ ಮೆಹ್ತಾ, ವೈ.ಎನ್ಕೆ. ಮೊದಲಾದ ಮಾಧ್ಯಮ ಲೋಕದ ಹೀರೋಗಳ ಪರಿಚಯ ಆದದ್ದೇ ಭಟ್ಟರ ಬರವಣಿಗೆಗಳ ಮೂಲಕ. ಇನ್ನು ಅವರ ಬರೆದ ’ಭತ್ತದ ತೆನೆ’, ’ನನ್ನ ಪ್ರೀತಿಯ ವೈಎನ್ಕೆ’, ’ಕಲಾಂಗೆ ಸಲಾಂ’, ’ನೀವೂ  ಗೆಲ್ಲಬಲ್ಲಿರಿ’(ಇದು ಶಿವ್ ಖೇರಾ ಅವರ  You can win ಪುಸ್ತಕದ ಕನ್ನಡ ಅನುವಾದ) ಪುಸ್ತಕಗಳನ್ನು ನಾನು ಓದಿದ್ದೇನೆ. ’ಅಜಾತಶತ್ರು(ಅಟಲ್ ಬಿಹಾರಿ ವಾಜಪೇಯಿಯವರ ಜೀವನ ಚರಿತ್ರೆ)’ಯನ್ನು ಅರ್ಧಂಬರ್ಧ ಓದಿದ್ದೇನೆ! ಎಲ್ಲಾ ಪುಸ್ತಕಗಳೂ ಇಷ್ಟವಾಗಿವೆ. ಅವರ ’ಜನಗಳ ಮನ’ ಅಂಕಣದಿಂದ ಪರಿಚಯವಾದ ಜನರೆಷ್ಟೋ? ಅಲ್ಲಿ ಓದಿ ನಕ್ಕ ಜೋಕುಗಳೆಷ್ಟೋ? ಅನೇಕ ಜನರ ಸಾಧನಾ ಪಥವನ್ನು ವಿವರಿಸಿದ, ಹಲವಾರು ಸ್ಪೂರ್ತಿದಾಯಕ ’ನೂರೆಂಟು ಮಾತು’ಗಳನ್ನಾಡಿದ, ಎಷ್ಟೋ ಹೊಸ ಬರಹಗಾರರನ್ನು ಪರಿಚಯಿಸಿ-ಪ್ರೋತ್ಸಾಹಿಸಿದ,  ’ಸುದ್ದಿಮನೆಯ ಕಥೆ’ಯ ಮೂಲಕ ಪತ್ರಿಕೋದ್ಯಮದ ಟ್ರೇನಿಂಗ್ ಕೊಡುತ್ತಿರುವ, ಪತ್ರಿಕೆಯನ್ನು ನಿರಂತರವಾಗಿ ಬದಲಾವಣೆಗೆ ಒಡ್ಡುತ್ತಾ ಹೊಸ ಸಾಧ್ಯತೆಗಳನ್ನು ಹುಡುಕುತ್ತಾ ಸಾಗಿರುವ,  ವಿಜಯ ಕರ್ನಾಟಕಕ್ಕೆ ಅಪಾರ ಓದುಗ ಸಮೂಹ ಸೃಷ್ಟಿಸಿದ ವಿಶ್ವೇಶ್ವರ ಭಟ್ಟರಿಗೆ ಧನ್ಯವಾದಪೂರ್ವಕ ಸೆಲ್ಯೂಟ್!.
    
      ಕನ್ನಡ ಪತ್ರಿಕಾ ರಂಗಕ್ಕೆ ಹೊಸ ರೂಪ ನೀಡಿದ,ಕನ್ನಡದ ಪತ್ರಿಕಾ ರಂಗದಲ್ಲಿ ಹಲವು ಮೊದಲುಗಳನ್ನು ಪರಿಚಯಿಸಿದ , ಕನ್ನಡದ ಓದಿನ ರುಚಿಯನ್ನು ಹೆಚ್ಚಿಸಿದ ಸಮಸ್ತ ಕನ್ನಡಿಗರ ಹೆಮ್ಮೆ ’ವಿಜಯ ಕರ್ನಾಟಕ’ಕ್ಕೆ ನನ್ನದೊಂದು ನಮಸ್ಕಾರ ಮತ್ತು ಧನ್ಯವಾದ!!

                                                                     ಇಂತಿ ಎಲ್ಲರವ,
                                                               ಕಾಡಸಿದ್ಧೇಶ್ವರ ಕರಗುಪ್ಪಿ
                                                                     ಹಿಡಕಲ್ ಡ್ಯಾಂ

Monday, November 1, 2010

ನಮಗೆ ಕನ್ನಡ, ಕನ್ನಡಕ್ಕೆ ನಾವು??

     ನವಂಬರ್ ಒಂದು ಮತ್ತೆ ಬಂದಿದೆ. ಸರ್ಕಾರದ್ದು ಬದಲಾಗದ ಸಂಕಲ್ಪ.ನಂಜುಂಡಪ್ಪ ವರದಿ ಅನುಷ್ಟಾನ ಮಾಡ್ತೀವಿ,  ಮಹಾರಾಷ್ಟ್ರದವರು ನಂಜುಂಡಪ್ಪ ವರದಿಗೆ ಭದ್ಧರಾಗಿರಬೇಕು, ನಂಜುಂಡಪ್ಪ ವರದಿಯೇ ಅಂತಿಮ, ಸರೋಜಿನಿ ಮಹಿಶಿ ವರದಿಯಂತೆ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತೇವೆ, ರೈಲ್ವೇ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ, ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ; ಈ ಕುರಿತು ಸಧ್ಯದಲ್ಲೇ ಪ್ರಧಾನಿ ಬಳಿಗೆ ನಿಯೋಗ, ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲೇ ನಡೆಸುತ್ತೇವೆ,..ಇತ್ಯಾದಿ ಇತ್ಯಾದಿ.

     ಇನ್ನು ನಾವು? ಎರಡು ದಿನ ಮುಂಚೆಯೇ "ಕನ್ನಡ ರಾಜ್ಯೋತ್ಸವದ" ಶುಭಾಶಯಗಳ ವಿನಿಮಯ ಶುರು. Happy kannada raajyothsava ಅಂತ ಟೈಪಿಸುವವರೂ ಉಂಟು! ರಾಜ್ಯೋತ್ಸವ ಒಂದಿನ ಪೂರ್ತಿ ಕನ್ನಡ ಭಜನೆ-ಸ್ಮರಣೆ. "ಇಡೀ ಭಾರತದಲ್ಲಿ ಏಳು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಯಾವುದಾದರು ಇದ್ರೆ ಅದು ಕನ್ನಡ ಅನ್ನೋ ಮಾತನ್ನ ಈ ಸಂದರ್ಭದಲ್ಲಿ ಹೇಳೋಕೆ ಇಷ್ಟ ಪಡ್ತೀನಿ"  ಅಂತ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸೋದು. ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೇ ಕಳಿಸಿ ಕನ್ನಡಕ್ಕೆ ’ಕೈ’ ಎತ್ತೊ ಬಹುಸಂಖ್ಯಾತ ಶಿಕ್ಷಕರು, ಕನ್ನಡ ಹೋರಾಟಗಾರರು-ಹಾರಾಟಗಾರರು! "ಕನ್ನಡವೇ ಎಲ್ಲಾ" ಅಂತ ಹಾಡಿ ಕುಣಿದು ಆಂಗ್ಲ "ಮಾಧ್ಯಮ"ದಲ್ಲಿ ಸಂದರ್ಶನ ಕೊಡೋ ಚಲನಚಿತ್ರನಟನಟಿಯರು, ಕಿರುತೆರೆ ನಿರೂಪಕ/ಕಿಯರು. ಈ ಎಲ್ಲಾ ಕ್ಷೇತ್ರಗಳಲ್ಲೂ ಅಪವಾದ ಎಂಬತಿರುವವರೂ ಇದ್ದಾರೆ, ಆದರೆ ಅವರು ಸಂಖ್ಯೆ ತೀರಾ ಕಮ್ಮಿ.
     ಕನ್ನಡ ಇಂದು ಹಲವಾರು ಕಾರಣಗಳಿಂದ ಬಹಳಷ್ಟು ಜನರಿಂದ ಅಸಡ್ಡೆಗೆ ಗುರಿಯಾಗುತ್ತಿದೆ. ಕನ್ನಡದ ಬಳಕೆ ಕಡಿಮೆಯಾಗಿದೆ. ಇದಕ್ಕೆ ಸರ್ಕಾರದ ಕೆಲವು ಲೋಪಗಳೂ ಕಾರಣ ಅನ್ನೋದು ನನ್ನ ಅನಿಸಿಕೆ. ಕನ್ನಡದ ಬಳಕೆ ಹೆಚ್ಚಾಗಬೇಕಾದರೆ ಸರ್ಕಾರ ಕೆಲವು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಈ ಕುರಿತು ನನ್ನ ಕೆಲವು ಸಲಹೆಗಳು.

 * ಕನ್ನಡ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಕುಸಿಯೋದನ್ನು ತಡೆಯಬೇಕಾದರೆ ಮೊದಲು ಅಲ್ಲಿನ ಬೋಧನಾ ಗುಣಮಟ್ಟವನ್ನು ವಿಶೇಷವಾಗಿ ಇಂಗ್ಲೀಷ್ ಭಾಷಾ ಬೋಧನಾ ಗುಣಮಟ್ಟವನ್ನು ಹೆಚ್ಚಿಸಬೇಕು. ಅಂತೇಯೇ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸಶಕ್ತವಾಗಿ ಕನ್ನಡದ ಬೋಧನೆಯಾಗುವಂತೆ ನೋಡಿಕೊಳ್ಳಬೇಕು. ಕಾಟಾಚಾರಕ್ಕೆ ಕನ್ನಡ ಕಲಿಸುತ್ತಿರುವ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸುಧಾರಿತ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು.

 * ಮಾಹಿತಿ ತಂತ್ರಜ್ಞಾನದ ಈ ದಿನಗಳಲ್ಲಿ ಯಾವುದೇ ವಿಷಯದ ಬಗ್ಗೆ ನಾವು ಮಾಹಿತಿ ಸಂಗ್ರಹಿಸುವುದು ಕಷ್ಟದ ಕೆಲಸವಲ್ಲ.ಆದರೆ ಆಂಗ್ಲ ಭಾಷೆಯಲ್ಲಿ ಇರುವಷ್ಟು ಮಾಹಿತಿ ಕನ್ನಡ ಭಾಷೆಯಲ್ಲಿ ಲಭ್ಯವಿಲ್ಲ. ಮಾಹಿತಿಯ ’ಕನ್ನಡೀಕರಣ’ ಕ್ಕೆ ಸರ್ಕಾರ ಗಂಭೀರವಾಗಿ ಪ್ರಯತ್ನಿಸಬೇಕು. ಕನ್ನಡ ತಂತ್ರಾಂಶಗಳ ಅಭಿವ್ರುದ್ಧಿಗೆ ಪ್ರೋತ್ಸಾಹ ನೀಡಬೇಕು.ಗಣಕ ಯಂತ್ರಗಳಲ್ಲಿ ಕನ್ನಡ ರಾರಾಜಿಸಿದರೆ ಜನರನ್ನು ಮುಟ್ಟುವುದು ಕಷ್ಟವಾಗದು.

 * ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಒಂದು ಸುಸಜ್ಜಿತ ಕನ್ನಡ ಪುಸ್ತಕ ಮಳಿಗೆಯನ್ನು ಸ್ಥಾಪಿಸಬೇಕು.

 * ನಾವು ಅತಿಯಾಗಿ ಬಳಸುವ ಅನ್ಯ ಭಾಷೆಯ ಪದಗಳನ್ನು ಮುಕ್ತವಾಗಿ ಕನ್ನಡಕ್ಕೆ ಸೇರಿಸಿಕೊಳ್ಳಬೇಕು.ಕೇವಲ ೨೬ ಅಕ್ಶರಗಳ         ಆಂಗ್ಲ ಭಾಷೆ ಜಗತ್ತಿನಾದ್ಯಂತ ಹರಡಲು ಅದು ಬೇರೆ ಭಾಷೆಯ ಪದಗಳನ್ನು ತನ್ನದಾಗಿಸಿಕೊಳ್ಳುತ್ತಿರುವುದೂ ಪ್ರಮುಖ ಕಾರಣ.  ಕನ್ನಡವೂ ಸಹ ಮುಕ್ತವಾಗಿ ಬೇರೆ ಭಾಷೆಯ ಪದಗಳ ಕನ್ನಡೀಕರಣಕ್ಕೆ ಮುಂದಾಗಬೇಕು.

     ನಮ್ಮ ಪಾತ್ರ: ಕನ್ನಡ ಭಾಷೆಯನ್ನು ಹೆಚ್ಚೆಚ್ಚು ಬಳಕೆ ಮಾಡುವ ಮೂಲಕ ನಮ್ಮ ಕನ್ನಡತನವನ್ನು ಉಳಿಸಿ ಬೆಳೆಸಬೇಕಿದೆ. ಇಷ್ಟಕ್ಕೂ ಕನ್ನಡದ ಹೊಣೆ ಕೇವಲ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಕ್ಷಣೆ ವೇದಿಕೆಗಳದ್ದಲ್ಲ.
     ಹೀಗೂ ಉಂಟು!:ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬನ ಬೈಕಿನ ಮೇಲೆ ಕನ್ನಡ ನಾಮಫಲಕ ನೋಡಿದ ನಾನು ಖುಶಿಯಿಂದ ಅವನಿಗೆ "ಎನ್ಲೆ ನಂಬರ್ ಪ್ಲೇಟ್ ಕನ್ನಡದಾಗ ಬರಶೀಲಾ? ಭಾರ್ರಿ ಆತ್ಪಾ" ಎಂದ ತಕ್ಷಣ ಅವನು "ಹೂಂಲೆ ಸುಳಿ ಮಕ್ಳ ಪೋಲಿಸರಿಗಿ ಗೊತ್ತ ಆಗಬಾರದಲಾ ಅದಕ್ಕ್" ಅಂದ! ಕನ್ನಡ ನಾಮಫಲಕ ಹಾಕಿಸೋ ಎಲ್ಲರಿಗೂ ಇದೇ ಉದ್ದೇಶ ಇರುತ್ತೆ ಅನ್ನೋದು ನನ್ನ ಉದ್ದೇಶವಲ್ಲ.ಕನ್ನಡವನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಬಳಸುತ್ತಿರುವ ಅವನನ್ನು ಕಂಡು ನಾನು ಬೆರಗಾಗಿದ್ದು ಮಾತ್ರ ಖರೆ.

     ಸರ್ಕಾರ ಏನೇ ಕ್ರಮ ಕೈಗೊಂಡರೂ ಅಂತಿಮವಾಗಿ ಕನ್ನಡದ ಅಳಿವು-ಉಳಿವು-ಏಳಿಗೆ ಎಲ್ಲ ನಮ್ಮ ಮನೋಧರ್ಮದ ಮೇಲೆಯೇ ಅವಲಂಬಿತವಾಗಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಮಾಡಿಕೊಂಡವರು ಉಳಿದವರಿಗೆ ಅರ್ಥ ಮಾಡಿಸಬೇಕು!

                                   ಜೈ ಕರ್ನಾಟಕ.
                                                                                   ಇಂತಿ ಎಲ್ಲರವ,
                                                                       ಕಾಡಸಿದ್ಧೇಶ್ವರ ಕರಗುಪ್ಪಿ
                                                                                    ಹಿಡಕಲ್ ಡ್ಯಾಂ

ಹೌದು ಅಂದ್ರೆ ಹೌದು;ಇಲ್ಲಾ ಅಂದ್ರೆ ಇಲ್ಲ!

      ನಮಸ್ಕಾರ.

      ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

      ಬಹಳ ದಿನಗಳಿಂದಲೂ; ಅಲ್ಲ ಕೆಲವು ವಷ೯ಗಳಿಂದಲೂ ನನ್ನದೊಂದು ಬ್ಲಾಗು ಮಾಡಬೇಕು ಅನ್ನೋ ಯೋಚನೆ/ಯೋಜನೆ ಮುಂದೂಡುತ್ತಲೇ ಬಂದಿದ್ದ ನಾನು ಕಡೆಗೂ ಬ್ಲಾಗ್ ರಿಜಿಸ್ಟರ್ ಮಾಡಿಸಿಬಿಟ್ಟೆ! ರಾಜ್ಯೋತ್ಸವದ ದಿನ ಪ್ರಥಮ ಬರಹ ಪ್ರಕಟಿಸಲು ನಿರ್ಧಾರ ಮಾಡಿಬಿಟ್ಟೆ!
      ಬ್ಲಾಗ್ ಶುರು ಮಾಡಿದರೆ ಅದನ್ನು ಓದ್ತಾರಾ?  ಜನ ಓದೋ ಹಾಗೆ ನಾನು ಬರೆಯಬಲ್ಲೆನಾ?  ಶುರು ಮಾಡಿದ ಬ್ಲಾಗನ್ನು ನಿಯಮಿತವಾಗಿ update ಮಾಡೋಕೆ ನನ್ನಿಂದಾಗುತ್ತಾ? "ಬ್ಲಾಗ್"ಗೆ ಬರೆಯೋ ಅರ್ಹತೆ ನನ್ನಲ್ಲಿದೆಯಾ? ಆರ್ಕುಟ್, ಫೇಸ್ಬುಕ್, ಟ್ವಿಟ್ಟರ್ ಇದ್ರೂ ಬ್ಲಾಗಿನ ಅವಶ್ಯಕತೆ ಇದೆಯಾ?,.....ಇಂಥಾ ಹಲವಾರು ಪ್ರಶ್ನೆಗಳು! ಇಂಥಾ ಪ್ರಶ್ನೆಗಳನ್ನು ನನಗೆ ನಾನೇ ಎಷ್ಟೋ  ಸಲ ಕೇಳಿಕೊಂಡಿದ್ದೇನೆ.ಅದಕ್ಕೆ ನನ್ನಿಂದ ನನಗೆ ದೊರಕಿದ ಉತ್ತರ:
     "ಹೌದು ಅಂದ್ರೆ ಹೌದು; ಇಲ್ಲಾ ಅಂದ್ರೆ ಇಲ್ಲ!"
      ಬಹುಶಃ ನಮ್ಮ ಹಲವಾರು ಪ್ರಶ್ನೆಗಳಿಗೆ ಬಹಳಷ್ಟು ಸಲ ಇದೆ ಉತ್ತರ. ಯಾವುದೇ ಕೆಲಸ ಶುರು ಮಾಡೋವಾಗಲೂ ನಮಗೆ ಈ ಎರಡು ಆಯ್ಕೆ ಇದ್ದೇ ಇರುತ್ತವೆ. ತನಗೆ ಬೇಕಾದ ಆಯ್ಕೆಗೆ ಕಾರಣಗಳನ್ನು ಮನಸ್ಸು ಹುಡುಕುತ್ತದೆ! ಅದರ ನಿಯಂತ್ರಣವೇ ಎಲ್ಲದಕ್ಕೂ ಮೂಲ. ಇತ್ತೀಚೆಗೆ ಓದಿದ ಒಂದು ಮಾತು ಈ ಬ್ಲಾಗು ಇಷ್ಟು ಬೇಗ(?) ಶುರು ಆಗೋಕೆ ಕಾರಣ.
      It is always now or never!
      ಇದೇ ಆ ಮಾತು.
      ಡಿಗ್ರೀ ಆಗಲಿ; ನಂತರ ಬ್ಲಾಗ್ ಶುರು ಮಾಡಿದರಾಯಿತು, ನಿಧಾನವಾಗಿ ಕನ್ನಡ ಟೈಪಿಂಗ್ ಕಲಿತು, ಅದರಲ್ಲಿ ಪಳಗಿದ ನಂತರ ಬ್ಲಾಗ್ ಮಾಡಿದರಾಯಿತು, ಕನ್ನಡದ ಪ್ರಮುಖ ಬ್ಲಾಗ್‍ಗಳನ್ನೆಲ್ಲ ಓದಿ, ನಂತರ ಬ್ಲಾಗ್ ಶುರು ಮಾಡಿದರಾಯಿತು(ಆ ಬ್ಲಾಗ್ ಯಾವುವು ಯಾವನಿಗ್ಗೊತ್ತು?!) ಅನ್ನೋ ಹತ್ತಾರು ಅಡೆತಡೆಗಳನ್ನು ಎದುರಿಸಲು ಸಹಾಯ ಮಾಡಿದ್ದು ಈ ಮೇಲಿನ ಮಾತು!
      ಇನ್ನು ಈ ಬ್ಲಾಗಿನ ಮೊದಲ ಬರಹದಲ್ಲಿ ನನ್ನ ಬಗ್ಗೆ ನಾನು ಹೇಳಕೋಬೇಕಾ? ಬ್ಲಾಗ್ ಒದಿ, ನಾನು ನಿಮಗೆ ಅರ್ಥ ಆದರೂ ಆಗಬಹುದು! ಆಗದಿದ್ದರೂ ನಿಮಗೇನೂ ಲುಕ್ಸಾನಿಲ್ಲ!!
      ನಾನು ಬ್ಲಾಗಿನಲ್ಲಿ ಬರೆದ ವಿಷಯಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಏನಾದರು ತಪ್ಪಾಗಿದ್ದರೆ ತಿಳಿಸಿ. ಚರ್ಚೆ-ಸಂವಾದಕ್ಕೆ ನಾನು ಯಾವಾಗಲೂ ಮುಕ್ತ ಮುಕ್ತ ಮುಕ್ತ! ಯಾವುದೇ ವಿಷಯದ ಬಗ್ಗೆ ’ಹ್ಞೂಂ’ ಅಂತ ತಲೆ ಅಲ್ಲಾಡಿಸೋಕೆ ಬಹಳ ಪ್ರಯಾಸ ಪಡಬೇಕಿಲ್ಲ."ಇಲ್ಲ ಅದು ತಪ್ಪು" ಅಂತ ಹೇಳೋಕೆ ಪುರಾವೆ ಬೇಕಾಗುತ್ತೆ.ತಪ್ಪು ಪ್ರಕಟವಾದಾಗ ಅದನ್ನು ತಿಳಿಸಿ, ತಿದ್ದಿಕೊಂಡರಾಯಿತು.
      ಕನ್ನಡ ’ಬರಹ’ ತಂತ್ರಾಂಶದ ಸಹಾಯ ಇಲ್ಲದಿದ್ದರೆ ಈ ಬರಹ ಸಿದ್ಧವಾಗುತ್ತಿರಲಿಲ್ಲ. ಬರಹ ತಂತ್ರಾಂಶದ ಶೇಶಾದ್ರಿವಾಸು ಚಂದ್ರಶೇಖರನ್, ಕನ್ನಡಿಗರಿಗೆ ನಿರಂತರವಾಗಿ ಗಣಕ ಯಂತ್ರ ಮತ್ತು ಅಂತರ್ಜಾಲ ಸಂಬಂಧಿ ಮಾಹಿತಿ ನೀಡುತ್ತಾ ಬಂದಿರುವ ಡಾ.ಯು.ಬಿ.ಪವನಜ ಮತ್ತು ನನಗೆ ಕನ್ನಡದಲ್ಲಿ ಟೈಪಿಸಲು ನೆರವಾದ ನನ್ನ ಸ್ನೇಹಿತ ಶ್ರೀನಿವಾಸ ನಾಯಿಕ ಮತ್ತು ಇಲ್ಲೀವರೆಗೆ ಓದಿದ ನಿಮಗೆ: ನನ್ನ ಧನ್ಯವಾದಗಳು.    
                                                                                    
                                                               ಇಂತಿ ಎಲ್ಲರವ,
                                                        ಕಾಡಸಿದ್ಧೇಶ್ವರ ಕರಗುಪ್ಪಿ
                                                          ಹಿಡಕಲ್ ಡ್ಯಾಂ