ದಿನದಿಂದ ದಿನಕ್ಕೆ ನಾನು ಥ್ಯಾಂಕ್ಸ್ ಹೇಳಬೇಕಾದವರ ಲಿಸ್ಟ್ ದೊಡ್ಡದಾಗುತ್ತ ಹೋಗುತ್ತಿದೆ. ಅಲ್ಬರ್ಟ್ ಐನ್ ಸ್ಟೀನ್ ಹೇಳಿದ ಮಾತಿದು “A hundred times everyday I remind myself that my inner and outer life is depended on the labors of other men; living and dead, and I must exert myself in order to give in the same measure as I have received and still receiving”
ಈಗ ನಾನು ಅರ್ಜೆoಟಾಗಿ ಧನ್ಯವಾದ ಸಲ್ಲಿಸಬೇಕಾದದ್ದು ವಿಜಯ ಕರ್ನಾಟಕಕ್ಕೆ! ನನಗೆ ಪಠ್ಯೇತರ ಓದಿನಲ್ಲಿ ಮೊದಲು ಆಸಕ್ತಿ ಮೂಡಿಸಿದ್ದು ಶಿವರಾಮ ಕಾರಂತರು. ನಂತರ ಅದನ್ನು ಪೋಶಿಸಿ ಬೆಳೆಸಿದ್ದು "ವಿಜಯ ಕರ್ನಾಟಕ"! ಅದರಲ್ಲೂ ವಿಜಯ ಕರ್ನಾಟಕದ ಸಂಪಾದಕೀಯ ಪುಟ ಅಂದಿನಿಂದ ಇವತ್ತಿನವರೆಗೆ ನನಗೆ ಒಂದು ಆಕರ್ಷಣೆಯಾಗಿಯೇ ಉಳಿದಿದೆ. ವಿಜಯ ಕರ್ನಾಟಕಕ್ಕೆ ನಾನು ಧನ್ಯವಾದ ಹೇಳಲೇಬೇಕು! ಇಷ್ಟಕ್ಕೂ ವಿಜಯ ಕರ್ನಾಟಕ ಮಾಡಿದ್ದೇನು ಸಾಮಾನ್ಯ ಕೆಲಸವನ್ನೆ? ಮೊದಲು ಅತ್ಯಂತ ಕಡಿಮೆ ಬೆಲೆಗೆ ಪತ್ರಿಕೆ ಮಾರಾಟ ಮಾಡುವ ಮೂಲಕ ಜನರನ್ನು(ಓದುಗರನ್ನು) ಆಕರ್ಷಿಸಿದ ವಿಜಯ ಕರ್ನಾಟಕ ನಂತರ ತನ್ನ ಹೊಸತನ, ದಿಟ್ಟತನ, ವಿಭಿನ್ನತೆಗಳಿಂದ ಜನರ ಮನಸ್ಸನ್ನು ಇಂದಿಗೂ ಹಿಡಿದಿಟ್ಟಿದೆ. ಕನ್ನಡ ಪತ್ರಿಕೆಗಳ ಪ್ರಸಾರವನ್ನು ದಾಖಲೆ ಮಟ್ಟಕ್ಕೆ ಏರಿಸಿದ್ದು ವಿಜಯ ಕರ್ನಾಟಕ. ನಿದ್ರಿಸುತ್ತಿದ್ದ ಕನ್ನಡದ ಇತರ ಪತ್ರಿಕೆಗಳಿಗೆ ಶಾಕ್ ಕೊಟ್ಟು ಓಡೋ ಹಾಗೆ ಮಾಡಿದ್ದು ವಿಜಯ ಕರ್ನಾಟಕ. ಇತ್ತೀಚೆಗೆ ಜಾಹೀರಾತುಗಳು ಸ್ವಲ್ಪ ಜಾಸ್ತಿಯಾಗಿದೆ. ನಮ್ಮ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ೨೫ನೇ ವರ್ಷ ಪೂರೈಸಿದಾಗ ವಿಶೇಷ ವರದಿ/ಸಂಚಿಕೆ ಪ್ರಕಟಿಸದೇ ಇದ್ದದ್ದು ವಿಜಯ ಕರ್ನಾಟಕದ ಬಗ್ಗೆ ನನಗಿರುವ objection!. ಕರ್ನಾಟಕದಲ್ಲಿ ವಿರೋಧ ಪಕ್ಷದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವುದು ಕಾಂಗ್ರೆಸ್ಸೂ ಅಲ್ಲ ಜೆ.ಡಿ.ಎಸ್ಸೂ ಅಲ್ಲ; ಅದು ವಿಜಯ ಕರ್ನಾಟಕ! ಆಡಳಿತ ಪಕ್ಷದ ಕೆಲಸವನ್ನೂ ವಿಜಯ ಕರ್ನಾಟಕ ನಿರ್ವಹಿಸಿದೆ.(ದಾಂಡೇಲಿ ಸಮೀಪದ ಅರಣ್ಯವನ್ನು ಸರ್ಕಾರದ ಕಡೆಯಿಂದ ಹಾರ್ನ್ ಬಿಲ್ ಹಕ್ಕಿಯ ರಕ್ಷಿತ ಅರಣ್ಯವಾಗಿ ಘೋಷಿಸುವಂತೆ ಒತ್ತಾಯಿಸಿ ಯಶಸ್ವಿಯಾಗಿದ್ದು, ಬರ್ಹೇನ್ ಕನ್ನಡ ಸಂಘಕ್ಕೆ ೧ ಕೋಟಿ ರುಪಾಯಿ ದೊರಕಿಸಿಕೊಟ್ಟಿದ್ದು,...)
ವಿಜಯ ಕರ್ನಾಟಕದ ಕೆಲವು ಅಂಕಣಕಾರರು ಕನ್ನಡದ ಉಳಿದ ದಿನಪತ್ರಿಕೆಗಳ ಸಂಪಾದಕರಿಗಿಂತ ಹೆಚ್ಚು ಖ್ಯಾತಿ,ಪ್ರಸಿದ್ಧಿ ಗಳಿಸಿದ್ದಾರೆ! ವಿಜಯ ಕರ್ನಾಟಕದ ಸ್ಟಾರ್ ಅಂಕಣಕಾರರಲ್ಲೊಬ್ಬರಾದ ಪ್ರತಾಪ್ ಸಿಂಹರವರು ತಮ್ಮ ಹಲವು ಪುಸ್ತಕಗಳನ್ನು pdf ಫಾರ್ಮ್ಯಾಟ್ ನಲ್ಲಿ ತಮ್ಮ ವೆಬ್ ಸೈಟ್( http://pratapsimha.com/)ನಲ್ಲಿ ಪ್ರಕಟಿಸಿರುವುದು(ಉಚಿತವಾಗಿ!) ನನಗೆ ತುಂಬ ಆಶ್ಚರ್ಯ ಮೂಡಿಸಿದೆ. ’ಬೆತ್ತಲೆ ಜಗತ್ತು’ ನನ್ನ ಇಷ್ಟದ ಅಂಕಣಗಳಲ್ಲೊಂದು. ಅಮೆರಿಕದಲ್ಲಿ ನೆಲೆಸಿದ್ದರೂ ಅತ್ಯಂತ ಸ್ಪಷ್ಟ, ಶುದ್ಧ ಕನ್ನಡದಲ್ಲಿ ಬರೆಯೋ ಶ್ರೀವತ್ಸ ಜೋಶಿಯವರು ತಮ್ಮ”ಪರಾಗ ಸ್ಪರ್ಶ’ ಅಂಕಣಗಳನ್ನು ಧ್ವನಿಮಾಧ್ಯಮದಲ್ಲೂ ಪ್ರಕಟಿಸುತ್ತಾರೆ!(ಈ ವಾರದ ಅಂಕಣವನ್ನು ಇಲ್ಲಿ ಕೇಳಬಹುದು http://sjoshi.podbean.com/) ಅದೂ ಇಂಪಾದ ಸಂಗೀತದೊಂದಿಗೆ! ಅವರ ಅಂಕಣಕ್ಕೆ ’ಪರಾಗಸ್ಪರ್ಶ’ ಎಂದು ನಾಮಕರಣವಾಗುವುದಕ್ಕಿಂತ ಮುಂಚಿನಿಂದಲೂ ಅದನ್ನು ಓದುತ್ತಿದ್ದೇನೆ. ನನಗೆ ಆಶ್ಚರ್ಯ ಮೂಡಿಸೋ ಮತ್ತೊಂದು ಅಂಕಣ ರಾಧಾಕೃಷ್ಣ ಭಡ್ತಿ ಅವರ ’ನೀರು-ನೆರಳು’ ಅಂಕಣ. ನೀರಿನ ಬಗ್ಗೆ ಪ್ರತೀ ವಾರ ಅದೆಲ್ಲಿಂದ ವಿಷಯ ತರ್ತಾರೋ? ಹಲವಾರು ವರ್ಷಗಟ್ಟಲೆ ನೀರು ಮತ್ತು ಪರಿಸರ ಸಂಬಂಧೀ ವಿಷಯಗಳನ್ನು ಬರೆಯೋದು ಅಂದ್ರೆ? ಅವರು ನಿಜಕ್ಕೂ ಅಭಿನಂದನರ್ಹರು. ಇದರ ಜೊತೆಗೆ ರವಿ ಬೆಳಗೆರೆಯವರ ’ಸೂರ್ಯ ಶಿಕಾರಿ’(ಕೆಲವೊಮ್ಮೆ ಹಾಯ್ ಬೆಂಗಳೂರಿನ ’ಬಾಟಮ್ ಐಟೆಮ್’ನ ಬರಹಗಳು ಈ ಅಂಕಣದಲ್ಲಿ ಬಂದಿದ್ದು ನನಗೆ ನೆನಪಿದೆ ಅಥವಾ ಎಲ್ಲ ಬರಹಗಳೂ ಅಲ್ಲಿಯ ಐಟೆಮ್ ಗಳಾ? ನನಗಿನ್ನೂ ಗೊತ್ತಾಗಿಲ್ಲಾ), ಪ್ರಚಲಿತ ವಿಷಯಗಳ ಬಗ್ಗೆ ಪ್ರಖರವಾಗಿ ಬರೆಯೋ ಲೋಕೇಶ್ ಕಾಯರ್ಗ ಅವರ ’ಸಕಾಲಿಕ’, ಆಡಳಿತ ಮತ್ತು ಪ್ರತಿಪಕ್ಷಗಳೆರಡಕ್ಕೂ ವಿರೋಧ ಪಕ್ಷವಾಗಿರುವ ಪಿ.ತ್ಯಾಗರಜ್ ಅವರ ’ಓಳಸುಳಿ’, ’ಚಾಟಿ ಚಟಾಕಿ’, titleನಲ್ಲೇ ನಗೆ ಚಿಮ್ಮಿಸೋ ಕೆ.ವಿ.ಪ್ರಭಾಕರ್ ಅವರ ’ಟಾಂಗ್’, ಜಿ.ಎನ್.ಮೋಹನ್ ಅವರ ’ಮೀಡಿಯಾ ಮಿರ್ಚಿ’, ಸಚಿವ ಸುರೇಶ್ ಕುಮಾರ್ ಅವರ ’ಅನಿಸಿಕೆ’, ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳ ’ಬಿಸಿಲು ಬೆಳದಿಂಗಳು’, ಷಡಕ್ಷರಿ ಅವರ ’ಕ್ಷಣ ಹೊತ್ತು ಆನಿಮುತ್ತು’, ಮುನಿಶ್ರೀ ತರುಣ್ ಸಾಗರ್ ಜಿ ಅವರ ’ನಗ್ನಸತ್ಯ’, ಕೆ.ವಿ.ತಿರುಮಲೇಶ್ ಅವರ ’ಆಳ ನಿರಾಳ’, ಎ.ಅರ್.ಮಣಿಕಾಂತ್ ಅವರ ಬರಹಗಳು, ಅವಾಗವಾಗ ಬಂದು ಹೋಗೊ ವಿನಾಯಕ್ ಭಟ್ ಮುರೂರು, ಚೈತನ್ಯ ಹೆಗಡೆ, ರಮೆಶ್ ಕುಮಾರ್ ನಾಯಕ್ ಅವರ ಲೇಖನಗಳು, ಹಿಂದೆ ಪ್ರಕಟವಾಗುತ್ತಿದ್ದ ಯಂಡಮೂರಿ ವೀರೇಂದ್ರನಾಥ, ಚಕ್ರವರ್ತಿ ಸೂಲಿಬೆಲೆ, ಸುಧಾ ಮುರ್ತಿ, ಎಚ್.ವೈ.ಶಾರದಾಪ್ರಸಾದ್, ಯಶವಂತ್ ಸರದೇಶಪಾಂಡೆ, ಎಚ್,ಡುಂಡಿರಾಜ್, ಹಿರೇಮಗಳೂರು ಕಣ್ಣನ್ ಅವರ ಲೇಖನಗಳು.... (ಕೆಲವೊಮ್ಮೆ ಪತ್ರಿಕೆಯಲ್ಲಿ ಪ್ರಕಟವಾದದ್ದಕ್ಕಿಂತ ಭಿನ್ನ ಅಭಿಪ್ರಾಯವನ್ನು ನಾನು ಹೊಂದಿದ್ದರೂ) ಇವೆಲ್ಲ ಒಳ್ಳೆಯ ಓದಿನ ಖುಷಿ ನೀಡಿವೆ.
ಇವರೆಲ್ಲರಿಗೆ ಕಿರೀಟಪ್ರಾಯವಾಗಿ ನಮ್ಮ ವಿಶ್ವೇಶ್ವರ ಭಟ್ಟರು! ವಿಜಯ ಕರ್ನಾಟಕ ತನ್ನ ಸ್ಟಾರ್ ಸ್ಥಾನಮಾನ ಪಡೆದದ್ದು ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಭಟ್ಟರ ಕಾರ್ಯನಿರ್ವಹಣೆಯನ್ನು ತೋರಿಸುತ್ತೆ. ಹಲವು ವರ್ಷಗಳಿಂದ ಅವರ ಬರಹಗಳ ಅಭಿಮಾನಿ ಓದುಗ ನಾನು. ಮುರ್ಡೊಕ್, ಗೋಯೆಂಕಾ,ರುಸ್ಸಿ ಕರಂಜಿಯಾ, ಪಿ.ಸಾಯಿನಾಥ್, ಖುಶ್ವಂತ್ ಸಿಂಗ್, ವಿನೋದ್ ಮೆಹ್ತಾ, ವೈ.ಎನ್ಕೆ. ಮೊದಲಾದ ಮಾಧ್ಯಮ ಲೋಕದ ಹೀರೋಗಳ ಪರಿಚಯ ಆದದ್ದೇ ಭಟ್ಟರ ಬರವಣಿಗೆಗಳ ಮೂಲಕ. ಇನ್ನು ಅವರ ಬರೆದ ’ಭತ್ತದ ತೆನೆ’, ’ನನ್ನ ಪ್ರೀತಿಯ ವೈಎನ್ಕೆ’, ’ಕಲಾಂಗೆ ಸಲಾಂ’, ’ನೀವೂ ಗೆಲ್ಲಬಲ್ಲಿರಿ’(ಇದು ಶಿವ್ ಖೇರಾ ಅವರ You can win ಪುಸ್ತಕದ ಕನ್ನಡ ಅನುವಾದ) ಪುಸ್ತಕಗಳನ್ನು ನಾನು ಓದಿದ್ದೇನೆ. ’ಅಜಾತಶತ್ರು(ಅಟಲ್ ಬಿಹಾರಿ ವಾಜಪೇಯಿಯವರ ಜೀವನ ಚರಿತ್ರೆ)’ಯನ್ನು ಅರ್ಧಂಬರ್ಧ ಓದಿದ್ದೇನೆ! ಎಲ್ಲಾ ಪುಸ್ತಕಗಳೂ ಇಷ್ಟವಾಗಿವೆ. ಅವರ ’ಜನಗಳ ಮನ’ ಅಂಕಣದಿಂದ ಪರಿಚಯವಾದ ಜನರೆಷ್ಟೋ? ಅಲ್ಲಿ ಓದಿ ನಕ್ಕ ಜೋಕುಗಳೆಷ್ಟೋ? ಅನೇಕ ಜನರ ಸಾಧನಾ ಪಥವನ್ನು ವಿವರಿಸಿದ, ಹಲವಾರು ಸ್ಪೂರ್ತಿದಾಯಕ ’ನೂರೆಂಟು ಮಾತು’ಗಳನ್ನಾಡಿದ, ಎಷ್ಟೋ ಹೊಸ ಬರಹಗಾರರನ್ನು ಪರಿಚಯಿಸಿ-ಪ್ರೋತ್ಸಾಹಿಸಿದ, ’ಸುದ್ದಿಮನೆಯ ಕಥೆ’ಯ ಮೂಲಕ ಪತ್ರಿಕೋದ್ಯಮದ ಟ್ರೇನಿಂಗ್ ಕೊಡುತ್ತಿರುವ, ಪತ್ರಿಕೆಯನ್ನು ನಿರಂತರವಾಗಿ ಬದಲಾವಣೆಗೆ ಒಡ್ಡುತ್ತಾ ಹೊಸ ಸಾಧ್ಯತೆಗಳನ್ನು ಹುಡುಕುತ್ತಾ ಸಾಗಿರುವ, ವಿಜಯ ಕರ್ನಾಟಕಕ್ಕೆ ಅಪಾರ ಓದುಗ ಸಮೂಹ ಸೃಷ್ಟಿಸಿದ ವಿಶ್ವೇಶ್ವರ ಭಟ್ಟರಿಗೆ ಧನ್ಯವಾದಪೂರ್ವಕ ಸೆಲ್ಯೂಟ್!.
ಕನ್ನಡ ಪತ್ರಿಕಾ ರಂಗಕ್ಕೆ ಹೊಸ ರೂಪ ನೀಡಿದ,ಕನ್ನಡದ ಪತ್ರಿಕಾ ರಂಗದಲ್ಲಿ ಹಲವು ಮೊದಲುಗಳನ್ನು ಪರಿಚಯಿಸಿದ , ಕನ್ನಡದ ಓದಿನ ರುಚಿಯನ್ನು ಹೆಚ್ಚಿಸಿದ ಸಮಸ್ತ ಕನ್ನಡಿಗರ ಹೆಮ್ಮೆ ’ವಿಜಯ ಕರ್ನಾಟಕ’ಕ್ಕೆ ನನ್ನದೊಂದು ನಮಸ್ಕಾರ ಮತ್ತು ಧನ್ಯವಾದ!!
ಇಂತಿ ಎಲ್ಲರವ,
ಕಾಡಸಿದ್ಧೇಶ್ವರ ಕರಗುಪ್ಪಿ
ಹಿಡಕಲ್ ಡ್ಯಾಂ